ಜಗತ್ತಿನ ಬುದ್ದಿವಂತ ಡೈರೆಕ್ಟರ್‌ಗಳ ಪಟ್ಟಿಯಲ್ಲಿ ಹೆಸರನ್ನು ಪಡೆದಿರುವ ಹಾಗೂ ಇಡೀ ದೇಶವೇ ಮೆಚ್ಚಿಕೊಂಡ ಬುದ್ಧಿವಂತ ನಿರ್ದೇಶಕರ ಪಟ್ಟಿಗೆ ನಮ್ಮ ಕರುನಾಡಿನ ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ಉಪೇಂದ್ರ ಕೂಡ ಸೇರುತ್ತಾರೆ. ಉಪೇಂದ್ರರ ಸಾರಥ್ಯದಲ್ಲಿ ಬರುವಂಥ ಚಿತ್ರಗಳು ಹೊಸ ಆಯಾಮವನ್ನು ಸೃಷ್ಠಿಸುತ್ತದೆ. ಅವರು ನಿರ್ದೇಶನದ ಸಿನಿಮಾದಲ್ಲಿ ವಿಭಿನ್ನವಾದ ನಿರೂಪಣಾ ಶೈಲಿಯನ್ನು ನೋಡಬಹುದು  ಹಾಗೂ ತಲೆಗೊಂದಿಷ್ಟು ಯೋಚನೆಯನ್ನು ಹತ್ತಿಸುವಂತಹ ಚಿತ್ರಕತೆ ಇವರ ಚಿತ್ರದಲ್ಲಿರುತ್ತದೆ.

 

ಇವರ ಸಿನಿಮಾದಲ್ಲಿ ಕಥೆ , ನಿರೂಪಣಾ ಶೈಲಿ ಹಾಗೂ ತಾಂತ್ರಿಕ ವರ್ಗ ಎಲ್ಲವೂ ಹೊಸ ಛಾಪನ್ನು ಮೂಡಿಸುತ್ತದೆ. ಹಾಗೆಯೇ ಅವರು ಯಾರೊಂದಿಗೆ ಕೆಲಸ ಮಾಡುತ್ತಾರೋ ಅವರನ್ನು ಕೂಡ ಜೊತೆ ಜೊತೆಯಲ್ಲಿ ಬುದ್ಧಿವಂತರಾಗಿ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಅದೇನೇ ಇರಲಿ ಉಪೇಂದ್ರರೊಂದಿಗೆ ಕೆಲಸ ಮಾಡಲು ಪ್ರತಿಯೊಬ್ಬ ಯುವ ನಿರ್ದೇಶಕರೂ  ಕೂಡ ಕಾತುರದಿಂದ ಯಾಯುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಈಗ ಬುದ್ಧಿವಂತ -೨ ಚಿತ್ರಕ್ಕೆ ಒಬ್ಬ ಯುವ ನಿರ್ದೇಶಕರನ್ನು ಕರೆತಂದಿದ್ದಾರೆ.

 

ಹೌದು ಈ ಪ್ರತಿಭೆಯ ಹೆಸರೇ ಜಯರಾಮ್. ಭದ್ರಾವತಿಯಲ್ಲಿ ಸಿಡಿ ಅಂಗಡಿ ನಡೆಸುತ್ತಿದ್ದ ಜಯರಾಮ್ ಸುಮಾರು ೧೨ ವರ್ಷಗಳ ಹಿಂದೆ ಬೆಂಗಳೂರಿಗೆ ಚಿತ್ರ ನಿರ್ದೇಶಕ ಆಗಬೇಕೆಂಬ ಆಸೆಯೊಂದಿಗೆ ಮಾಯಾನಗರಿಯನ್ನು ಪ್ರವೇಶ ಮಾಡುತ್ತಾರೆ. ಪುನೀತ್ ರಾಜಕುಮಾರ್ ಅಭಿನಯದ ಅರಸು ಸೇರಿದಂತೆ ಮೆರವಣಿಗೆ , ಮೈಲಾರಿ , ಲಕ್ಷ್ಮಿ , ಕೋಕೋ , ಟೋಪಿವಾಲಾ , ಹಾಗೂ ನಿರ್ದೇಶಕ ಆರ್. ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್ನ ಬ್ರಹ್ಮ ಚಿತ್ರದಲ್ಲೂ ಕೆಲಸ ಮಾಡಿ ಬಹಳಷ್ಟು ಅನುಭವವನ್ನು ಪಡೆದಿದ್ದಾರೆ. ಇದನ್ನೆಲ್ಲ ಗಮನಿಸಿದ ಉಪೇಂದ್ರ ಬುದ್ಧಿವಂತ -೨ ಚಿತ್ರಕ್ಕೆ ಅವರನ್ನೇ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ.

 

ಹಾಲಿವುಡ್ ಸ್ಟೈಲ್ನಲ್ಲಿ ಸಿದ್ಧಗೊಂಡಿರುವ ಈ ಬುದ್ಧಿವಂತ -೨ ಚಿತ್ರದಲ್ಲಿ ಟ್ವಿಸ್ಟ್ ಗಳ ಸರಮಾಲೆ ಕಾಣಸಿಗಲಿದೆ. ಈ ಚಿತ್ರದ ಕಥೆಯನ್ನು ಕ್ರಿಸ್ಟಲ್ ಪಾರ್ಕ್ ಪ್ರೊಡಕ್ಷನ್ಸ್ ನೀಡಿದ್ದು , ಟಿ. ಆರ್. ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಸಾಲು ಸಾಲು ಸದಭಿರುಚಿಯ ಚಿತ್ರಗಳನ್ನು ನೀಡಲು ಮುಂದಾಗಿರುವ ಈ ಸಂಸ್ಥೆಯಲ್ಲಿ ಬುದ್ಧಿವಂತ -೨ ಚಿತ್ರ ಕೂಡ ಬಹಳ ವಿಶೇಷವಾಗಿದೆಯoತೆ.

 

ಈಗ ಈ ಚಿತ್ರದ ಟಾಕಿ ಪೋರ್ಷನ್ ಎಲ್ಲಾ ಮುಗಿದಿದೆ. ಒಟ್ಟು ಐದು ಹಾಡುಗಳಿದ್ದು , ಗುರುಕಿರಣ್ ಸಂಗೀತವನ್ನು ನೀಡಿದ್ದಾರೆ. ಈಗಾಗಲೇ ಎರಡು ಹಾಡು ಪೂರ್ಣಗೊಳಿಸಿದ್ದು ಇನ್ನೂ ಮೂರು ಹಾಡು ಬಾಕಿ ಇದೆಯಂತೆ. ಭರ್ಜರಿ ಐದು ಫೈಟ್ ಗಳನ್ನು ಒಳಗೊಂಡಿರುವ ಈ ಚಿತ್ರದ ಮೂಲಕ ಒಂದು ಸಂದೇಶವನ್ನು ಕೂಡ ಸಿನಿಪ್ರಿಯರಿಗೆ ಸಿಗಲಿದೆಯಂತೆ. ಇದೊಂದು ಮೈಂಡ್ ಗೇಮ್ ಚಿತ್ರವಾಗಿದ್ದು , ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೊರೋನಾ ಹಾವಳಿಯಿಂದ ಸದ್ಯಕ್ಕೆ ಎಲ್ಲವೂ ಸ್ಥಗಿತಗೊಂಡಿದ್ದು , ಎಲ್ಲವೂ ನಿರಾಳವಾದ ನಂತರ ಚಿತ್ರ ಚಟುವಟಿಕೆ ಕಾರ್ಯ ಆರಂಭಗೊಳ್ಳಲಿದೆ.

 

ರಿಯಲ್ ಸ್ಟಾರ್ ಉಪೇಂದ್ರ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಆದಿತ್ಯ, ಮೇಘನ ರಾಜ್, ಸೋನಾಲ್ ಮೊಂತೆರೊ ಮುಖ್ಯ ಭೂಮಿಕೆಯಲ್ಲಿದ್ದಾರೆ.ಉಳಿದಂತೆ ರಾಜೇಶ್ ನಟರಂಗ, ಅಶೋಕ್, ಪ್ರೇರಣಾ, ಕಡ್ಡಿಪುಡಿ ಚಂದ್ರು ಮತ್ತಿತರು ನಟಿಸುತ್ತಿದ್ದಾರೆ.

మరింత సమాచారం తెలుసుకోండి: