ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಬೆಂಗಳೂರು ಸೇರಿದಂತೆ ನಾಲ್ಕು ನಗರಗಳು ತೆಗೆದುಕೊಂಡಿರುವ ಕ್ರಮಗಳು ದೇಶಕ್ಕೆ ಮಾದರಿ ಎಂದು ಕೇಂದ್ರ ಸರ್ಕಾರ ಪ್ರಶಂಸಿಸಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು, ತಮಿಳುನಾಡಿನ ಚೆನ್ನೈ, ರಾಜಸ್ತಾನದ ಜೈಪುರ್ ಹಾಗೂ ಮಧ್ಯ ಪ್ರದೇಶದ ಇಂದೋರ್ ಮಹಾನಗರಗಳು ಕೊರೊನಾ ನಿಯಂತ್ರಿಸಲು ಮಾದರಿ ನಗರ ಎಂದು ಕೇಂದ್ರ ಘೋಷಿಸಿದೆ. ಅಷ್ಟಕ್ಕೂ ಈ ನಗರಗಳು ಕೊರೋನಾತಡೆಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಗೊತ್ತಾ..?

 

. ಕರ್ನಾಟಕದ ರಾಜಧಾನಿ ಬೆಂಗಳೂರು, ತಮಿಳುನಾಡಿನ ಚೆನ್ನೈ, ರಾಜಸ್ತಾನದ ಜೈಪುರ್ ಹಾಗೂ ಮಧ್ಯ ಪ್ರದೇಶದ ಇಂದೋರ್ ಮಹಾನಗರಗಳಲ್ಲಿ ಕೊರೊನಾ ಹಬ್ಬುವುದನ್ನು ಸ್ಥಳೀಯ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳನ್ನು ಕೇಂದ್ರ ಸರ್ಕಾರದ ಎರಡು ಇಲಾಖೆಗಳು ಗಮನ ಹರಿಸಿದ್ದವು. ಯಾವ ದಿನಾಂಕದಂದು ಅಧಿಕೃತವಾಗಿ ಕೊರೊನಾ ಪ್ರವೇಶ ಮಾಡಿತು, ಅಂದಿನಿಂದ ಇಂದಿನವರೆಗೆ ಹಬ್ಬಿರುವ ಸೋಂಕಿನ ಪ್ರಮಾಣ, ಸಕ್ರಿಯವಾಗಿರುವ ಪ್ರಕರಣಗಳು, ಇಳಿಮುಖವಾಗುತ್ತಿರುವ ಪ್ರಕರಣಗಳು, ಆಸ್ಪತ್ರೆಯಿಂದ ಬಿಡುಗಡೆ ಯಾಗಿರುವುದು, ಸಾರ್ವಜನಿಕರ ಪ್ರತಿಕ್ರಿಯೆ ಸೇರಿದಂತೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಕೂಲಂಕುಶವಾಗಿ ಲೆಕ್ಕ ಹಾಕಿದೆ.

 

ಈ ಎಲ್ಲಾ ಅಂಶಗಳು ಬೆಂಗಳೂರು, ಚೆನ್ನೈ, ಇಂದೋರ್ ಮತ್ತು ಜೈಪುರ್ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಕೊರೊನಾ ನಿಯಂತ್ರಿಸಲು ಬೇರೆ ನಗರಗಳಿಗೆ ಆದರ್ಶವಾಗಿವೆ ಎಂದು ಪ್ರಶಂಸಿಸಿದರು. ಕೆಂಪು ವಲಯ, ಹಸಿರು ವಲಯ, ಕಿತ್ತಲೆ ವಲಯಗಳು, ಸ್ಲಂ, ಬಫರ್ ಝೋನ್, ಕಂಟೈನ್ಮೆಂಟ್ ವಲಯಗಳು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸೋಂಕು ಹಬ್ಬಿರುವುದು ಹಾಗೂ ಈಗ ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ಅಭ್ಯಸಿಸಿದೆ.

ಈ ನಾಲ್ಕೂ ಮಹಾನಗರಗಳಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಪ್ರಾರಂಭದಲ್ಲೇ ತೆಗೆದುಕೊಂಡ ಬಿಗಿಯಾದ ಕ್ರಮ, ಸಾರ್ವಜನಿಕರ ಸಹಕಾರ, ಪೊಲೀಸರು, ನರ್ಸ್‍ಗಳು, ವೈದ್ಯರು, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯ ಸಹಭಾಗಿತ್ವದಲ್ಲಿ ತೆಗೆದು ಕೊಂಡ ಕ್ರಮಗಳಿಗೆ ಕೇಂದ್ರ ಪ್ರಶಂಸೆ ಸೂಚಿಸಿದೆ.

 

ಸಾರ್ವಜನಿಕರು ಸೋಂಕು ಹಬ್ಬುವುದನ್ನು ತಡೆಗಟ್ಟಲು ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು, ಮನೆಯಿಂದ ಹೊರಬರದೆ ಇದ್ದದ್ದು, ಬಸ್ ಮತ್ತು ವಾಹನಗಳ ಬಳಕೆ ಕಡಿಮೆ ಮಾಡಿಕೊಂಡಿದ್ದು ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಈ ನಗರಗಳಲ್ಲಿ ಸೋಂಕು ಇಳಿಮುಖವಾಗಿದೆ.

 

ವಿಶೇಷವಾಗಿ ಇಲ್ಲಿನ ಸರ್ಕಾರ, ಸ್ಥಳೀಯ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು, ಬೇರೆ ರಾಜ್ಯಗಳಿಗೂ ಆದರ್ಶವಾಗಿವೆ. ಈ ನಿಯಮಗಳನ್ನು ಬೇರೆ ರಾಜ್ಯದವರು ಪಾಲನೆ ಮಾಡುವ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾವು ನಾಲ್ಕು ನಗರಗಳಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಬೇರೆ ರಾಜ್ಯಗಳಿಗೂ ಅಳವಡಿಸಿಕೊಳ್ಳುವಂತೆ ಸೂಚನೆ ಕೊಡುತ್ತೇವೆ. ಇದರಿಂದ ಸಂಪೂರ್ಣವಾಗಿಯಲ್ಲದಿದ್ದರೂ ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎಂದು ಪ್ರಮುಖ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

మరింత సమాచారం తెలుసుకోండి: