ಬೆಂಗಳೂರು:  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್ ವುಡ್ ಬಹು ನೀರಿಕ್ಷಿತ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಪಾರ್ಟ್ 01 ಈಗಾಗಲೇ ಬಿಡುಗಡೆಯಾಗಿ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಕೆಜಿಎಫ್ ಪಾರ್ಟ್ 2ರ ಚಿತ್ರೀಕರಣ ಶುರುವಾಗಿದೆ. ಆದರೆ ಈ ಪಾರ್ಟ್ 2 ಚಿತ್ರೀಕರಣ ಸ್ಥಗಿತವಾಗಿದ್ದು ಅಭಿಮಾನಿಗಳಲ್ಲಿ ಭಾರೀ ನಿರಾಸೆಯಾಗಿದೆ. 


ಭಾರತ್ ಗೋಲ್ಟ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಪ್ರದೇಶ ವ್ಯಾಪ್ತಿಯ ಸೈನೈಡ್ ಗುಡ್ಡದಲ್ಲಿ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆದಂತೆ ಕೋಲಾರದ ರಾಬರ್ಟ್ ಸನ್ ಪೇಟೆಯ ಜೆಎಂಎಫ್'ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಪ್ರಸ್ತುತ  ಮಧ್ಯಂತರ ತಡೆಯಾಜ್ಞೆ ನೀಡಿ, ಆದೇಶ ಹೊರಡಿಸಿದೆ. ಸೈನೈಡ್ ಗುಡ್ಡದಲ್ಲಿ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಸದಂತೆ ಚಿತ್ರತಂಡಕ್ಕೆ ಸೂಚಿಸಿ ಅಧೀನ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು.


ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಜೊತೆಗೆ, ಈ ವಿಚಾರವಾಗಿ ಜೆಎಂಎಫ್'ಸಿ ಕೋರ್ಟ್ ನಲ್ಲಿ ಮೂಲ ದಾವೆ ಹೂಡಿದ್ದ ಎನ್.ಶ್ರೀನಿವಾಸ್'ಗೆ ತುರ್ತು ನೋಟಿಸ್ ಜಾರಿಗೊಳಿಸಿ, ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ..


ಕನ್ನಡ ಸೇರಿದಂತೆ ಪಂಚ ಭಾಷೆಯಲ್ಲಿ ತೆರೆಕಂಡ ಕೆ ಜಿ ಎಫ್ 1 ಚಿತ್ರವು ಭಾರೀ ಸದ್ದು ಮಾಡಿ, ನೂರಾರು ಕೋಟಿ ರೂ ಗಳಿಗೂ ಹೆಚ್ಚು ಹಣವನ್ನು ಬಾಚಿತ್ತು.  ಆದ್ದರಿಂದ ಚಿತ್ರದ ಪಾರ್ಟ್ 2 ಮೇಲೆ ಅಭಿಮಾನಿಗಳ ನಿರೀಕ್ಷೆ  ಹೆಚ್ಚಿತ್ತು. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ಆಗಿ  ಮಿಂಚಿದ್ದರು. ಇದೇ ಚಿತ್ರದ ಅತ್ಯುತ್ತಮ ನಟನೆಯಿಂದಾಗಿ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದು ಕನ್ನಡ ನಾಡಿಗೆ ಹೆಮ್ಮೆಯನ್ನು ತಂದಿದ್ದರು.


మరింత సమాచారం తెలుసుకోండి: