ಒಂದು ಕಡೆ ಕೊರೋನಾ ವೈರಸ್ ಬಿಕ್ಕಟ್ಟು ಒಂದು ಕಡೆಯಾದರೆ ಮತ್ತೊಂದು ಕಡೆ ಭಾರತದ ನಡುವೆ ಚೀನಾ ಗಡಿಯ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದ್ದು ಇದರಿಂದಾಗಿ ದೇಶದ ಶಾಂತಿ ಕದಡಿ ಹೋಗಿತ್ತು, ಇದನ್ನು ಇತ್ಯರ್ಥಗೊಳಿಸುವಂತಹ ದ್ವಿಪಕ್ಷೀಯ ಮಾತುಕತೆಯನ್ನು ಎರಡು ದಿನಗಳ ಕಾಲ ಚರ್ಚಿಸಲಾಯಿತು ಅಷ್ಟಕ್ಕೂ ಈ ಸಭೆಯ ಸಭೆಯ ಅಂತಿಮ ತೀರ್ಮಾನ ಏನು ಗೊತ್ತಾ..?

 

ಇಂಡೋ-ಚೀನಾ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ಸಭೆಯಲ್ಲಿಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಉಭಯ ದೇಶಗಳು ಸಕರಾತ್ಮಕವಾಗಿ ಸ್ಪಂದಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

 

ಈಗ ಜಾರಿಯಲ್ಲಿರುವ ಒಪ್ಪಂದಗಳ ಪ್ರಕಾರ, ಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಇತ್ಯರ್ಥಗೊಳಿಸಲು ಉಭಯ ದೇಶಗಳು ಸಮ್ಮತಿ ನೀಡಿವೆ ಎಂದು ಸಚಿವಾಲಯ ಹೇಳಿದೆ.

ಸಮಗ್ರ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ಮತ್ತು ಪ್ರಗತಿಗಾಗಿ ಎರಡೂ ದೇಶಗಳ ಗಡಿ ಪ್ರಾಂತ್ಯಗಳಲ್ಲಿ ಶಾಂತಿ, ಮತ್ತು ಸೌಹಾರ್ದತೆ ಅತ್ಯಂತ ಅನಿವಾರ್ಯ ಎಂಬುದು ಸಭೆ ವೇಳೆ ಭಾರತ ಮತ್ತು ಚೀನಾಗೆ ಮನವರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

 

ಲಡಾಖ್‍ನಲ್ಲಿ ನಿನ್ನೆ ನಡೆದ ಉನ್ನತ ಸೇನಾಧಿಕಾರಿಗಳ ಮಟ್ಟದ ಮಾತುಕತೆ ವೇಳೆ ಕೆಲವು ಭಿನ್ನಾಭಿಪ್ರಾಯಗಳ ನಡುವೆಯೂ ಗಡಿ ಭಾಗದ ದ್ವೇಷಮಯ ವಾತಾವರಣ ತಿಳಿಗೊಳಿಸುವ ಬಗ್ಗೆ ಭಾರತ-ಚೀನಾ ಧನಾತ್ಮಕವಾಗಿ ಸ್ಪಂದಿಸಿವೆ.

ಏಷ್ಯಾದ ಎರಡು ಪ್ರಬಲ ದೇಶಗಳಾದ ಭಾರತ ಮತ್ತು ಚೀನಾದಲ್ಲಿ ಕಿಲ್ಲರ್ ವೈರಸ್ ಕೊರೊನಾ ವಾವಳಿ ತೀವ್ರಗೊಂಡಿರುವಾಗಲೇ ಉಭಯ ರಾಷ್ಟ್ರಗಳ ನಡುವೆ ಉಲ್ಬಣಗೊಂಡಿರುವ ಗಡಿ ಬಿಕ್ಕಟ್ಟು ವಿಶ್ವದ ಅನೇಕ ದೇಶದಲ್ಲಿ ಆತಂಕ ಉಂಟು ಮಾಡಿದೆ.

ಲಡಾಖ್ ಮತ್ತು ಸಿಕ್ಕಿಂ ಗಡಿ ಪ್ರದೇಶಗಳಲ್ಲಿ ತಲೆದೋರಿರುವ ಗಡಿ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಭಾರತ ಮತ್ತು ಚೀನಾ ನಡುವೆ ನಿನ್ನೆ ಬೆಳಗ್ಗೆಯಿಂದ ನಡೆದ ಸುದೀರ್ಘ ಮಾತುಕತೆ ಬಹುತೇಕ ಫಲಪ್ರದವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

 

ಇಂಡೋ-ಚೀನಾ ಲೆಫ್ಟಿನೆಂಟ್ ಜನರಲ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಗಡಿಯಲ್ಲಿ ಸಂಯಮ ಕಾಯ್ದುಕೊಳ್ಳುವುದೂ ಸೇರಿದಂತೆ ಉಭಯ ದೇಶಗಳ ನಡುವೆ ಪ್ರಸ್ತುತ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ತಿಳಿಗೊಳಿಸುವ ಸಂಬಂಧ ಮಹತ್ವದ ಮಾತುಕತೆ ನಡೆಯಿತು.

 

ಈ ಹಿಂದೆ ಜರುಗಿದ ಸಮಾಲೋಚನೆಗಳ ಮುಂದುವರಿದ ಭಾಗವಾಗಿ ನಡೆದ ಈ ಸಭೆಯಲ್ಲಿ ವಿವಾದಗಳನ್ನು ಸದ್ಯಕ್ಕೆ ಅಂತ್ಯಗೊಳಿಸುವುದಕ್ಕೆ ಅದ್ಯತೆ ನೀಡಿ ಪ್ರಮುಖವಾಗಿ ಸಮಾಲೋಚನೆ ನಡೆಸಲಾಯಿತು.

ಒಂದು ಹಂತದಲ್ಲಿ ಎರಡು ದೇಶಗಳು ತಮ್ಮ ನಿಲುವುಗಳಿಗೆ ಬಿಗಿಪಟ್ಟು ಹಿಡಿದವು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸಂಷರ್ಘಕ್ಕೆ ಆಸ್ಪದ ಬೇಡ. ಎರಡೂ ದೇಶಗಳ ಗಡಿ ಪ್ರಾಂತ್ಯಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಅನಿವಾರ್ಯ ಎಂಬುದು ಮನವರಿಕೆಯಾಗಿದೆ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು.

 

ಲಡಾಕ್ ಚುಶೂಲ್ ವಲಯದ ಮಾಲ್ಕೋದಲ್ಲಿ ನಡೆದ ಸಭೆಯಲ್ಲಿ ಲೇಹ್ ವಲಯದ 14 ಕೋರ್ ಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು. ಗಡಿ ವಿಷಯದಲ್ಲಿ ಭಾರತದ ನಿಲುವನ್ನು ಅವರು ಚೀನಾದ ತಮ್ಮ ಸಹವರ್ತಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟರು.

 

ಲಡಾಕ್‍ನ ಪಾಂಗಾಂಗ್ ಸರೋವರ, ಗಲ್ವಾನ್ ಕಣಿವೆ ಮತ್ತು ಡಮ್ಟೋಕ್ ಪ್ರದೇಶಗಳಲ್ಲಿ ಚೀನಾದ ನಿರ್ಮಾಣ ಚಟುವಟಿಕೆಗಳ ಬಗ್ಗೆ ಭಾರತ ಈಗಾಗಲೇ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ತಿಂಗಳು ಎರಡೂ ಸೇನಾಪಡೆಗಳ ನಡುವೆ ಘರ್ಷಣೆ ನಡೆದು, ಆಗಿನಿಂದ ಪರಿಸ್ಥಿತಿ ಉಲ್ಬಣಗೊಂಡಿದೆ.

 

ಗಡಿ ಭಾಗದಲ್ಲಿ ಕದನ ಕಾರ್ಮೋಡಗಳು ಕವಿದಿದ್ದು, ಭಾರತ ತನ್ನ ಮೂರು ಸಶಸ್ತ್ರ ಪಡೆಗಳನ್ನು ನಿಯೋಜಿಸಿ ಚೀನಾಗೆ ಬಿಸಿ ಮುಟ್ಟಿಸಿದೆ. ಭಾರತಕ್ಕೆ ಸೇನಾ ಸಾಮಥ್ರ್ಯ ಮತ್ತು ವಿವಿಧ ದೇಶಗಳ ಬೆಂಬಲವನ್ನು ಕಂಡು ಈಗಾಗಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮೆತ್ತಗಾಗಿದ್ದು, ಶಾಂತಿಸೂತ್ರ ಸಂಧಾನಕ್ಕೆ ಒಲವು ತೋರಿದ್ದಾರೆ.

 

మరింత సమాచారం తెలుసుకోండి: