ಹೈದರಾಬಾದ್: ಅಭಿಮಾನಿಗಳೇ ನಟರ ನಿಜವಾದ ದೇವರು. ಅವರು ಹರಸಿ ಹಾರೈಸಿದಾಗ ಮಾತ್ರ ಒಂದು ಸಿನಿಮಾ ಹಿಟ್ ಆಗಲು ಸಾಧ್ಯ. ಹೌದು, ಈ ಮಾತನ್ನು ಮೇರು ನಟರೇ ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರೆಂದರೆ ಎಷ್ಟು ಇಷ್ಟವೋ ಅಭಿಮಾನಿಗಳನ್ನು ಕಂಡರೆ ನಟರಿಗೂ ಸಹ ಅಷ್ಟೇ ಇಷ್ಟ. ಇದಕ್ಕೆ ನಿದರ್ಶನವೆಂಬಂತಹ ಒಂದು ಘಟನೆಯು ನಡೆದಿದೆ. 
 
ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹಿರಿಯ ಅಭಿಮಾನಿ ನಿಧನರಾಗಿದ್ದು, ಇಬ್ಬರು ನಟರು ಸಂತಾಪ ಸೂಚಿಸಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ನೂರ್ ಅಹಮ್ಮದ್ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ಮೆಗಾ ಸ್ಟಾರ್ ಕುಟುಂಬಕ್ಕೆ ಬೆಂಬಲಿಸಿದ್ದಾರೆ. ಅಲ್ಲದೆ ಅವರು ‘ಗ್ರೇಟರ್ ಹೈದರಾಬಾದ್ ಮೆಗಾ ಫ್ಯಾನ್ಸ್ ಅಸೋಸಿಯೆಶನ್’ ಅಧ್ಯಕ್ಷರಾಗಿದ್ದರು. ಅಭಿಮಾನಿ ನಿಧನರಾದ ವಿಷಯ ತಿಳಿದು ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಅವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಈ ವೇಳೆ ಅಲ್ಲು ಅರ್ಜುನ್ ಕಣ್ಣೀರಿಟ್ಟಿದ್ದರು. ಬಳಿಕ ಅಲ್ಲು ಅರ್ಜುನ್, ನೂರ್ ಅಹಮ್ಮದ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ನಿರ್ಧರಿಸಿದ್ದಾರೆ. 
 
ಅಲ್ಲು ಅರ್ಜುನ್ ಅಲ್ಲದೆ ಚಿರಂಜೀವಿ ಅವರು ಕೂಡ ತಮ್ಮ ಹಿರಿಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದರು. ಚಿರಂಜೀವಿ ನೂರ್ ಅಹಮ್ಮದ್ ಮನೆಗೆ ಹೋಗಿ ಅವರ ಪತ್ನಿ ಹಾಗೂ ಮಕ್ಕಳಿಗೆ ಸಮಾಧಾನ ಮಾಡಿ ಧೈರ್ಯ ತುಂಬಿದರು. ನಟ ಸಾಯಿ ಧರಂ ತೇಜ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಮೆಗಾ ಫ್ಯಾನ್ಸ್ ಕುಟುಂಬದ ಸ್ತಂಭಗಳಲ್ಲಿ ಒಂದಾಗಿದ ಅಭಿಮಾನಿ ಇನ್ನಿಲ್ಲ. ನಾನು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದರು.
 
ಇದೀಗ ನೇರವಾಗಿ ಮನೆಗೆ ಭೇಟಿ ನೀಡಿ, ಸಂತಾಪ ಸೂಚಿಸಿ ಅವರನ್ನು ಸಂತೈಸಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಸಹ ನಿರ್ಧರಿಸಿರುವುದು ನಿಜಕ್ಕೂ ಅಭಿಮಾನಿಗಳು ಮೆಚ್ಚುವ ವಿಷಯವಾಗಿದೆ

మరింత సమాచారం తెలుసుకోండి: