ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ಅಧಿಕೃತವಾಗಿ ಲಿಖಿತ ಹೇಳಿಕೆ ನೀಡಿದೆ. ಹೌದು, ಶಾಕ್ ಆದರೂ ಸಹ ನಂಬಲೇ ಬೇಕಾದ ವಿಷಯವಿದು.
 
ಸಿಎಎ ರೀತಿ ಎನ್ ಆರ್ ಸಿಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸುವ ಯಾವುದಾದರು ಯೋಜನೆ ಹೊಂದಿದೆಯೇ ಎಂಬ ಪ್ರಶ್ನೆಗೆ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದು, ದೇಶಾದ್ಯಂತ ಎನ್ ಆರ್ ಸಿ ಜಾರಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ದೇಶಾದ್ಯಂತ ಎನ್ ಆರ್ ಸಿ ಜಾರಿ ಕುರಿತ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಹೇಗೆ ಜನರ ಮೇಲೆ ಹೆಚ್ಚುವರಿ ಭಾರ ಹೊರಿಸಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಶ್ನಿಸಿದೆ ಎಂದು ವರದಿ ತಿಳಿಸಿದೆ.
 
ಸೋಮವಾರ ಲೋಕಸಭೆಯಲ್ಲಿ ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಿಎಎ ಮತ್ತು ಎನ್ ಆರ್ ಸಿ ಮತ್ತು ಎನ್ ಪಿಆರ್ ಬಗ್ಗೆ ಚರ್ಚೆ ನಡೆಸಿ ಉತ್ತರ ನೀಡುವಂತೆ ಪಟ್ಟು ಹಿಡಿದಿದ್ದವು.
 
ಕಾಂಗ್ರೆಸ್ ಪಕ್ಷದ ಗುಲಾಂ ನಬಿ ಅಜಾದ್, ಡಿಎಂಕೆ, ಸಿಪಿಐ, ಸಿಪಿಐಎಂ, ಎನ್ ಸಿಪಿ, ಆರ್ ಜೆಡಿ, ಟಿಎಂಸಿ, ಎಸ್ಪಿ, ಬಿಎಸ್ಪಿ ನಿಯಮ 267ರ ಅಡಿ ನೋಟಿಸ್ ನೀಡಿ ಎಲ್ಲಾ ಚರ್ಚೆಯನ್ನು ಬದಿಗೊತ್ತಿ ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿ ಬಗ್ಗೆ ಚರ್ಚೆ ನಡೆಸುವಂತೆ ಮನವಿ ಮಾಡಿಕೊಂಡಿದ್ದವು ಎಂದು ತಿಳಿದು ಬಂದಿದೆ. ಎಲ್ಲಾ ಪ್ರತಿಭಟನೆ ಗಳು ನಿಲ್ಲುತ್ತಿವೆ ಸಿಎಎ  ವಿರುದ್ಧದ ಪರಿಸ್ಥಿತಿ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲಿ ಇದೀಗ ಮತ್ತೇ ಈ ವಿಷಯ ಸ್ಫೋಟಗೊಂಡಿದ್ದು, ಸಿಎಎ ಹಾಗೂ ಎನ್ ಆರ್ ಸಿ ವಿಚಾರದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗದಂತಾಗಿದೆ. ಪ್ರತಿಭಟನೆಗಳು ಪರಿಸ್ಥಿತಿ ಮುಂದುವರೆಯುತ್ತಾ ಇಲ್ಲವೆ ನಿಲ್ಲುತ್ತಾ ಎಂಬುದು ಕಾದು ನೋಡಬೇಕಾಗಿದೆ.
 
 

మరింత సమాచారం తెలుసుకోండి: