ಬೆಂಗಳೂರು: ಸ್ಯಾಂಡಲ್ ​ವುಡ್ ​ನಲ್ಲಿ ಈಗ ನಟ ನಿಖಿಲ್​ ಕುಮಾರಸ್ವಾಮಿ ಅವರ ಮದುವೆಯದ್ದೇ ಮಾತಾಗಿದೆ. ಕಾಂಗ್ರೆಸ್​ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳಾದ ರೇವತಿಯನ್ನು ನಿಖಿಲ್​ ವರಿಸಲಿದ್ದಾರೆ. ಹೀಗಾಗಿ ತಮ್ಮ ಭಾವಿ ಪತ್ನಿ ಬಗ್ಗೆ ನಿಖಿಲ್ ಏನ್ ಹೇಳಿದ್ದಾರೆ ಎಂಬುದು ನೀವೆ ಓದಿ.... 
 
ಮೊದಲಿಗೆ ಮದುವೆ ಗಾಸಿಪ್​ ಬಗ್ಗೆ ಮಾತು ಆರಂಭಿಸಿದ ನಿಖಿಲ್​, ಮದುವೆ ಫಿಕ್ಸ್​ ಆಗಿರುವುದು ನನಗೆ ಒಂದು ರೀತಿಯ ಸಮಾಧಾನವಾಗಿದೆ. ಏಕೆಂದರೆ ನಾನು ಕೂಡ ಚಿತ್ರರಂಗದಲ್ಲಿರುವುದರಿಂದ ನನ್ನ ಹೆಸರನ್ನು ಬೇರೆಯವರೊಂದಿಗೆ ಥಳುಕು ಹಾಕಲಾಗುತ್ತಿತ್ತು. ಇದರಿಂದ ನನಗೆ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ. ನನಗಾದರೆ ಪರವಾಗಿಲ್ಲ, ಹೆಣ್ಣು ಮಕ್ಕಳನ್ನೂ ಲಿಂಕ್​ ಮಾಡುತ್ತಿದ್ದರು.
 
ಸಿನಿಮಾ ರಂಗದಲ್ಲಿ ಇದೆಲ್ಲಾ ಇದ್ದುದ್ದೆ  ಆದರೂ ಕೊಂಚ ಬೇಸರ ತರಿಸೋದು.  ಇಂದು ನಮ್ಮ ತಂದೆ-ತಾಯಿಯವರು ಅದರಲ್ಲೂ ವಿಶೇಷವಾಗಿ ನಮ್ಮ ತಾತಾ-ಅಜ್ಜಿ, ಇಡೀ ಕುಟುಂಬ ನನಗೆ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ. ಆ ಹೆಣ್ಣು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದರು.
 
ರೇವತಿಯವರ ತಂದೆ ಉದ್ಯಮಿಯಾಗಿದ್ದಾರೆ. ಅವರಿಗೂ ರಾಜಕಾರಣಕ್ಕು ಸಂಬಂಧವಿಲ್ಲ. ಕಾಂಗ್ರೆಸ್​ ಶಾಸಕ ಕೃಷ್ಣಪ್ಪ ಅವರ ಸಂಬಂಧ ಇರುವುದರಿಂದ ಈ ರೀತಿ ಬಿಂಬಿತವಾಗುತ್ತಿದೆ. ಆಮೇಲೆ ನನಗೆ ರೇವತಿಯವರ ಪರಿಚಯವಿಲ್ಲ. ಇನ್ನು ನಾ ಅವರನ್ನು ನೋಡಿಲ್ಲ. ಅವರೊಟ್ಟಿಗೆ ಮಾತಾಡಿಲ್ಲ. ಮುಂದಿನ ದಿನಗಳಲ್ಲಿ ಮಾತಾಡುತ್ತೇನೆ. ಇದು ಸಂಪೂರ್ಣ ಅರೆಂಜ್​ ಮ್ಯಾರೇಜ್​ ಎಂದಿದ್ದಾರೆ.
 
ಮುಂದುವರೆದು, ದೊಡ್ಡ ಯೋಜನೆ ಏನಿಲ್ಲ. ನಮ್ಮನ್ನು ಪ್ರೀತಿಸುವವರ ನಡುವೆ ಮದುವೆ ಮಾಡಿಕೊಳ್ಳಬೇಕು ಮತ್ತು ಅವರಿಗೆ ಒಂದು ಒಳ್ಳೆಯ ಊಟ ಹಾಕಿಸಬೇಕು ಎಂಬ ನಿರೀಕ್ಷೆಯಲ್ಲಿ ನಾನು ಮತ್ತು ನನ್ನ ತಂದೆ ಇದ್ದೇವೆ ಎಂದು ಹೇಳಿದರು. ಮದುವೆ ಯಾವಾಗ ನಡೆಯುತ್ತಿದೆ ಎಂಬುವುದಕ್ಕೆ ಉತ್ತರಿಸಿದ ನಿಖಿಲ್​, ಹಂತ ಹಂತವಾಗಿ ತಿಳಿಸುತ್ತೇವೆ. ಇನ್ನೂ ಹಲವಾರು ಕಾರ್ಯಕ್ರಮಗಳು ನಡೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಹೇಳುವ ಸಂಗೀತ ಅಥವಾ ಮೆಹಂದಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಮದುವೆಯಾಗುವೆ.ದಿನಾಂಕ ನಿಗದಿಯಾದ ಮೇಲೆ ತಿಳಿಸುತ್ತೇವೆ ಎಂದು ತಮ್ಮ ಮಾತುಗಳನ್ನು ಆಡಿದ್ದಾರೆ.

మరింత సమాచారం తెలుసుకోండి: