ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭೇಟಿಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫುಲ್ ದಿಲ್ ಖುಷ್ ಆಗಿದ್ದಾರೆ. ಏಕೆಂದರೆ ಬಹು ದಿನಗಳಿಂದ ಮುಂದೂಡಲಾಗುತ್ತಿದ್ದ ಸಂಪುಟ ವಿಸ್ತರಣೆ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೂ ಕೂಡ ಕೆಲ ಶರತ್ತುಗಳನ್ನು ಹಾಕಿದ್ದಾರೆ. ಏನದು ಗೊತ್ತಾ! ಮುಂದೆ ಓದಿ... 
 
ಬಿಎಸ್‍ವೈ  ಖುಷ್ :
 
ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಭೇಟಿಯ ಬಳಿಕ ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜೊತೆಗೆ 25 ನಿಮಿಷ ಚರ್ಚೆ ಮಾಡಿದ್ದೇನೆ. ನಾವು ನೀಡಿದ ಸಲಹೆ ಹಾಗೂ ನೂತನ ಸಚಿವರ ಪಟ್ಟಿಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ನೀವು ಯಾವಾಗಬೇಕಾದರೂ ಸಚಿವ ಸಂಪುಟ ವಿಸ್ತರಣೆ ಮಾಡಿ ಅಂತ ಸಲಹೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ನಾಳೆ ರಾಜ್ಯದ ಕೆಲ ನಾಯಕರ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದರು. ಚರ್ಚೆ ನಡೆದ ಮೇಲೆ ಸಂಪುಟ ವಿಸ್ತರಣೆ ಪಕ್ಕಾ ಎಂದರು. ನಾವು ಅಂದುಕೊಂಡಂತೆ ಎಲ್ಲವೂ ಸರಳವಾಗಿ ಆಗಿದೆ. ಇನ್ನೇನು ಎರಡ್ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ. ಹೈಕಮಾಂಡ್ ನಾಯಕರು ಯಾವುದೇ ನೂತನ ಸಚಿವರ ಪಟ್ಟಿ ಸಿದ್ಧಪಡಿಸಿಲ್ಲ. ನಾವು ನೀಡಿದ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
 
ಸಚಿವ ಸಂಪುಟಕ್ಕೆ ಹೊಸದಾಗಿ ಯಾರು ಸೇರುತ್ತಾರೆ ಎನ್ನುವುದು ಎರಡು ದಿನಗಳಲ್ಲಿ ತಿಳಿಯಲಿದೆ. ಆದರೆ ಉಪ ಮುಖ್ಯಮಂತ್ರಿ ಸ್ಥಾನಗಳ ಹೆಚ್ಚಳವಿಲ್ಲ. ಈಗ ಇರುವವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೇನೆ. ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ, ಯೋಜನೆ ನೀಡುವಂತೆ ಮನವಿ ಮಾಡಿಕೊಂಡಿರುವೆ. ಹೀಗಾಗಿ ಅವರು ಹೆಚ್ಚಿನ ಅನುದಾನ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದು ಸಂತೋಷದಿಂದ ತಿಳಿಸಿದರು. ಇದರಿಂದ ಬಜೆಟ್ ಮೇಲಿನ ನಿರೀಕ್ಷೆಗಳು ಸಹ ಹೆಚ್ಚಿವೆ.

మరింత సమాచారం తెలుసుకోండి: