ಕೊವಿಡ್ 19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವು ಪ್ರಮುಖ ಪಾತ್ರವಹಿಸಿದ್ದು, ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ನೆರವು ನೀಡಿದೆ ಕೊವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ 150ಕ್ಕೂ ಅಧಿಕ ದೇಶಗಳಿಗೆ ವೈದ್ಯಕೀಯ ಮತ್ತು ಇತರೆ ಸಹಕಾರ ನೀಡಲಾಗಿದೆ, ಹಾಗೆಯೇ ಭಾರತದಲ್ಲಿಯೂ ಸಾಕಷ್ಟು ತುರ್ತು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ವಿಶ್ವ ಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯನ್ನುದ್ದೇಶಿಸಿ ಪ್ರಧಾನ ಹೇಳಿದ್ದಾರೆ.

ವಿಶ್ವಸಂಸ್ಥೆ ಸ್ಥಾಪನೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ2016ರ ಬಳಿಕ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮಂಡಳಿಯನ್ನುದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಮಂತ್ರವನ್ನು ಪುನರುಚ್ಚರಿಸಿದರು.

 

ಪೌಷ್ಟಿಕ ಆಹಾರ, ವಿದ್ಯುತ್, ಶಿಕ್ಷಣ ಕ್ಷೇತ್ರಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಭಾರತ ಒತ್ತು ನೀಡಿದೆ. ಮುಂದಿನ ಐದು ವರ್ಷಗಳಲ್ಲಿ ಶೇಕಡಾ ನೂರರಷ್ಟು ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. 70 ಮಿಲಿಯನ್ ಗ್ರಾಮೀಣ ಮಹಿಳೆಯರು ಭಾರತದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಸ್ವಚ್ಛತೆ ಹಾಗೂ ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಿರುದ್ಧ ಅಂದೋಲನ ನಡೆಸುವ ಮೂಲಕ ಪರಿಸರದ ಬಗ್ಗೆ ಇರುವ ಭಾರತದ ಬದ್ದತೆಯನ್ನ ಪ್ರದರ್ಶಿಸಿದ್ದೇವೆ ಎಂದು ಮೋದಿ ವಿವರಿಸಿದರು.

 

ಕಳೆದ ಆರು ವರ್ಷಗಳಲ್ಲಿ 400 ಮಿಲಿಯನ್ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ ಜನರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಭಾರತದಲ್ಲಿರುವ ಎಲ್ಲರಿಗೂ ಮನೆ ಯೋಜನೆ ಜಾರಿ ಮಾಡಿದ್ದು ಈ ಮೂಲಕ 14 ಮಿಲಿಯನ್ ಹೊಸ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಭಾರತದ ಯೋಜನೆಗಳನ್ನು ವಿಶ್ವ ಸಂಸ್ಥೆಯ ಸದಸ್ಯರಿಗೆ ವಿವರಿಸಿದರು.

 

ಕೊರೊನಾ ಬಗ್ಗೆ ಮಾತನಾಡಿದ ಮೋದಿ, ಕೊರೊನಾ ಎಲ್ಲ ರಾಷ್ಟ್ರಗಳ ಶಕ್ತಿಯನ್ನು ಪರೀಕ್ಷಿಸಿದೆ. ಭಾರತ ಕೊರೊನಾ ವಿರುದ್ಧದ ಹೋರಾಟವನ್ನು ಜನರ ಅಂದೋಲನವಾಗಿ ಮಾಡಿದೆ. ಕೊರೊನಾ ವಿರುದ್ಧ ಪ್ಯಾಕೇಜ್ ಘೋಷಣೆ ಮಾಡಿ ಜನರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದೇವೆ. ಆತ್ಮನಿರ್ಭರ ಮೂಲಕ ದೇಶದಲ್ಲಿ ಸ್ವಾವಲಂಬನೆಗೆ ಕರೆ ನೀಡಿದ್ದು ಇದನ್ನು ಸಾಧಿಸುವುದರಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ದೇಶಗಳಿಗೆ ವಿವರಿಸಿದರು.

 

ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆ ಹೊಂದಿರುವ ಭಾರತ ನೆರೆಹೊರೆಯ ರಾಷ್ಟ್ರಗಳಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ ಭಾರತ ಕ್ಷಿಪ್ರವಾಗಿ ನೆರವಿಗೆ ಧಾವಿಸಿದೆ ಹಾಗೂ ಮುಂದೆಯೂ ದಾವಿಸುತ್ತೆ, ವಿಶ್ವದ 150 ದೇಶಗಳಿಗೆ ನಾವು ನೆರವು ನೀಡಿದ್ದೇವೆ ಎಂದು ಇತರ ದೇಶಗಳೆಡೆ ಭಾರತಕ್ಕಿರುವ ಕಾಳಜಿಯನ್ನು ಮೋದಿ ವ್ಯಕ್ತಪಡಿಸಿದರು.

 

 

మరింత సమాచారం తెలుసుకోండి: