ಕೊರೋನಾ ದೇಶದಲ್ಲಿ ದಿನದಿಮದ ದಿನಕ್ಕ ಹೆಚ್ಚಾಗುತ್ತಿದೆ. ಈ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು ತಬ್ಲಿಗಿಗಳಿಂದ ಕೊರೋನಾ ಸೋಂಕು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ ಇದು ಶುದ್ದ ಸುಳ್ಳು ಇದರಿಂದಾಗಿ ಜನರಲ್ಲಿ ಕೋಮು ಭಾವನೆ ಹೆಚ್ಚಾಗುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ದೂರಿದ್ದಾರೆ..

 

ತಬ್ಲಿಘಿಗಳಿಂದ ಕರೊನಾ ಸೋಂಕು ಹೆಚ್ಚಾಯಿತು ಎನ್ನುವುದು ಕೋಮುವಾದಿಗಳ ಹುನ್ನಾರ. ಕರೊನಾ ಸೋಂಕನ್ನು ವ್ಯವಸ್ಥಿತವಾಗಿ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಪೂರ್ವಸಿದ್ಧತೆ, ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ಹಲವು ಸಮಸ್ಯೆ ಉದ್ಭವಿಸಿವೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವುದಾಗಿ ಹೇಳಿದ್ದಾರೆ.

 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಕಾಣಿಸಿಕೊಂಡ ಕೂಡಲೇ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರೆ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಲು ಸಾಧ್ಯವಾಗುತ್ತಿರಲಿಲ್ಲ. ಕೆಲಸವನ್ನು ಪ್ರಧಾನಿ ಮೋದಿ ಮಾಡಲಿಲ್ಲ. ಈ ಬಗ್ಗೆ ಪ್ರಧಾನಿ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ಸಿಎಂ ಬಿ.ಎಸ್​. ಯಡಿಯೂರಪ್ಪ ಮಾಡಲಿಲ್ಲ ಎಂದು ದೂರಿದರು.

 

ದೆಹಲಿಯಲ್ಲಿ ತಬ್ಲಿಘಿಗಳ ಸಮಾವೇಶಕ್ಕೆ ಪರವಾನಗಿ ಕೊಟ್ಟವರು ಯಾರು? ಕೇಂದ್ರ ಸರ್ಕಾರವೇ ಪರವಾನಗಿ ಕೊಟ್ಟಿದ್ದು ಮೊದಲನೆಯ ತಪ್ಪು. ಸೋಂಕು ತಡೆಗಟ್ಟದೆ ಇದ್ದದ್ದು ಎರಡನೇ ತಪ್ಪು. ಕೇಂದ್ರವೇ ಇದಕ್ಕೆ ಹೊಣೆ. ಇಟಲಿ, ಅಮೆರಿಕ, ಸ್ಪೇನ್​ನಲ್ಲಿ ಯಾವ ತಬ್ಲಿಘಿಗಳಿದ್ದರು? ತಬ್ಲಿಘಿಗಳ ವಿಷಯದಲ್ಲಿ ಕೋಮುವಾದಿಗಳು ನೀಡುತ್ತಿರುವ ಹೇಳಿಕೆ ರಾಜಕೀಯ ಹುನ್ನಾರ ಎಂದು ಟೀಕಿಸಿದರು.

 

ಮಾ.24ರಂದು ಲಾಕ್‍ಡೌನ್ ಘೋಷಿಸುವ ಮುನ್ನ ಸಿದ್ಧತೆಗಳೇ ಇರಲಿಲ್ಲ. ಒಂದು ವಾರದ ಮೊದಲೇ ಹೇಳಿದ್ದರೆ ವಲಸೆ ಕಾರ್ಮಿಕರು ಈ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕರ್ನಾಟಕದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಉಚಿತವಾಗಿ ಕಳುಹಿಸಬೇಕು. ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಇಲ್ಲಿಗೆ ಕರೆತರಬೇಕು ಎಂದು ಆಗ್ರಹಿಸಿದರು.

 

ಕರೊನಾ ಮಣಿಸುವ ಕೆಲಸದಲ್ಲಿ ಸರ್ಕಾರಕ್ಕೆ ನಾವು ಆರಂಭದಿಂದಲೂ ಸಹಕಾರ ನೀಡುತ್ತ ಬಂದಿದ್ದೇವೆ. ಆದರೆ, ನಮ್ಮ ಸಲಹೆ ಸೂಚನೆಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಶ್ರಮಿಕ ವರ್ಗದವರು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವಿವರಿಸಿ ಅವರ ಪರವಾಗಿ ಬೇಡಿಕೆ ಮಂಡಿಸಿದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದೇವೆ ಎಂದರು.


ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಏನೂ ಆಗುವುದಿಲ್ಲ. ಅದರ ಬದಲಿಗೆ ಬಡವರು, ಕಾರ್ಮಿಕರನ್ನು ರಕ್ಷಣೆ ಮಾಡಲಿ ಎಂದು ಪ್ರಧಾನಿ ಮೋದಿ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.

 

మరింత సమాచారం తెలుసుకోండి: