ಬೆಂಗಳೂರು: ಈ ಹಿಂದೆ ಚುನಾವಣೆಯಲ್ಲಿ ಭಾರೀ ಫೇಮಸ್ ಡೈಲಾಗ್ ಆಗಿದ್ದ ನಿಖಿಲ್ ಎಲ್ಲಿದ್ದಿಯಪ್ಪಾ ಆಯ್ತು ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಉಡುಪಿ ಮೂಲದ ಆದಿತ್ಯ ರಾವ್ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಮತ್ತೊಂದೆಡೆ ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ಹೆಸರಿನಲ್ಲಿ ಸಿನಿಮಾ ನಿರ್ಮಿಸಲು ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರು ಹೆಸರನ್ನು ನೋಂದಾಯಿಸಿದ್ದಾರೆ  ಎಂದು ತಿಳಿದುಬಂದಿದೆ. ಹೌದು, ಖ್ಯಾತ ಟೈಟಲ್ ಗಳೂ ಭಾರೀ ಸದ್ದು ಮಾಡುತ್ತವೆ. ಅದಕ್ಕಾಗಿಯೇ ಇದೀಗ ಆದಿತ್ಯ ರಾವ್ ಟೈಟಲ್ ಗೆ ಬಲು ಬೇಡಿಕೆ ಬಂದಿದೆ. 
 
ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕ ತುಳಸಿ ರಾಮ್ “ ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ” ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿರುವುದಾಗಿ ತಿಳಿದು ಬಂದಿದೆ.  ಆದಿತ್ಯ ರಾವ್ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗಲಿದೆಯಾ? ಇದಕ್ಕೆ ನಿರ್ಮಾಪಕರು ಯಾರು? ಹೀರೋ ಯಾರು? ಕಥೆ, ಚಿತ್ರಕಥೆ ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಶೀರ್ಷಿಕೆ ರಿಜಿಸ್ಟರ್ ಆದ ಕೂಡಲೇ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳುವುದು ಕಷ್ಟ.
 
ಯಾಕೆಂದರೆ ಕಳೆದ ಉಪ ಚುನಾವಣೆಯ ಪ್ರಚಾರದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ನಿಖಿಲ್ ಎಲ್ಲಿದ್ದಿಯಪ್ಪ ಶೀರ್ಷಿಕೆಯನ್ನು ನೋಂದಾಯಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಮತ್ತೊಂದೆಡೆ ಮತ್ತೊಂದು ವರದಿ ಪ್ರಕಾರ, ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸ್ಫೋಟಕ ಪ್ರಕರಣದ ಬಗ್ಗೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಸಿನಿಮಾ ಕಥೆ ಬರೆಯಲು ಮುಂದಾಗಿದ್ದಾರೆ ಎಂದು ತಿಳಿಸಿದೆ.
 
ಕಥೆ, ಚಿತ್ರಕಥೆ, ಸಂಭಾಷಣೆ ಚಂದ್ರಚೂಡ್ ಹೆಗಲೇರಿದ್ದು, ಈ ಸಿನಿಮಾಕ್ಕೆ ಆನೆ ಪಟಾಕಿ ಚಿತ್ರ ನಿರ್ಮಿಸಿದ್ದ ಸುರೇಶ್ ಮಂಗಳೂರು ಬಾಂಬ್ ಪ್ರಕರಣದ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರಂತೆ. ಸಿನಿಮಾಕ್ಕೆ ಐ ಯಾಮ್ ಕಲ್ಕಿ ಎಂದು ಹೆಸರಿಟ್ಟಿದ್ದು, ಏಕಕಾಲದಲ್ಲಿ ಕನ್ನಡ, ತಮಿಳು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಿರುವುದಾಗಿ ವರದಿ ತಿಳಿಸಿದೆ. ಖ್ಯಾತ ಹೆಸರುಗಳಲ್ಲಿ ಸಿನಿಮಾ ಮಾಡುವುದರಿಂದ ಭರ್ಜರಿ ಪ್ರಚಾರ ಸಿಗುವುದು ಎಂಬುದೇ ಆ ಟೈಟಲ್ ಗಳಿಗಿರುವ ಶಕ್ತಿಯಾಗಿದೆ.

మరింత సమాచారం తెలుసుకోండి: