ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸುರಿದ ಮಳೆ ನಿಜಕ್ಕೂ ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ. ನಾರಾಯಣಪುರ ಜಲಾಶಯದಿಂದ 6 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ನೀರು ಪ್ರವೇಶಿಸಿದ 26 ಗ್ರಾಮಗಳ ಪೈಕಿ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. 1.917 ಹೆಕ್ಟರ್ ಬೆಳೆ ಈಗಾಗಲೇ ನಿರಿನಲ್ಲಿ ಮುಳುಗಿ ರೈತರು ಕಣ್ಣಿರು ಹಾಕುತ್ತಿದ್ದಾರೆ. 

ಇನ್ನು ಲಿಂಗಸೂರು ತಾಲೂಕಿನ ನಡುಗಡ್ಡೆಯಲ್ಲಿಯೂ ರಕ್ಷಣಾ ತಂಡದವರೇ ಸಿಲುಕಿ ಹಾಕಿಕೊಂಡಿದ್ದರು.  ಇವರನ್ನು ಎನ್‌ಡಿಆರ್‌ಎಫ್ ತಂಡ ಬೋಟ್‌ ಮೂಲಕ ರಕ್ಷಣೆ ಮಾಡಿದೆ.  ಪ್ರವಾಹ ಪೀಡಿತರಿಗೆ ಇಡೀ ರಾಜ್ಯಕ್ಕೆ ರಾಜ್ಯವೇ ಸ್ಪಂಧನೆ ಮಾಡುತ್ತಿದೆ. ಈ ಸ್ಪಂದನೆ ರಾಜ್ಯ ಸರ್ಕಾರ ಮಾಡುವಂತ ಸ್ಪಂದನೆಗಿಂತ ಹೆಚ್ಚಾಗಿ ಇದೆ ಎನ್ನಬಹುದು.  ಏಕೆಂದರೆ ರಾಜ್ಯ ಸರ್ಕಾರ ಇನ್ನೂ ಅಗತ್ಯವಾದಷ್ಟು ಪರಿಹಾರ ಘೋಷಣೆ ಮಾಡಿಲ್ಲ. ಆದರೆ ರಾಜ್ಯದ ಜನತೆ ಆಹಾರ ಮತ್ತು ಸಾಮಗ್ರಿಗಳನ್ನು ಈಗಾಗಲೇ ಪೂರೈಸಿದೆ.

ಮಂತ್ರಾಲಯದಿಂದಲೇ 10 ಲಕ್ಷ  ನೆರವು ನೀಡಲಾಗುತ್ತಿದೆ. ಹೌದು ಉತ್ತರ ಕರ್ನಾಟಕದ ನೆರೆ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರಿಗೆ ನೆರವಾಗಲು ರಾಯಚೂರಿನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಜಿಗಳ ಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ತಾತ್ಕಾಲಿಕ  ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. 

ಇನ್ನು ಕೇಂದ್ರ ಸರ್ಕಾರ ಈ ನೆರೆ ಪರಿಹಾರಕ್ಕೆ ಅದ್ಹೇಗೆ ಸ್ಪಂಧಿಸುತ್ತದೆ ಎನ್ನುವದನ್ನು ನೋಡಬೇಕಿದೆ . ಇನ್ನು ಇನ್‌ಪೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ಈಗಾಗಲೇ 10 ಕೋಟಿ ನೆರವನ್ನು ನೀಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಉಳಿದ ಉದ್ಯಮಿಗಳಿಗೂ ಸಹ ಇವರು ಆದರ್ಶಪ್ರಾಯರಾಗಿದ್ದಾರೆ. ಬಾಗಲಕೋಟೆ, ಧಾರವಾಡ ಬೆಳಗಾವಿ ಸೇರಿದಂತೆ ವಿವಿಧ ಕಡೆಗಳಲ್ಲಿನ ಸಂತ್ರಸ್ತರಿಗೆ ಆಹಾರ ಧಾನ್ಯ, ಬಟ್ಟೆಗಳು ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ನೆರೆ ಸಂತ್ರಸ್ತರು ಯಾವುದಕ್ಕೂ ಭಯಪಡದೆ ಧೈರ್ಯವಾಗಿ ಇರಬೇಕು ಎಂದು ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಜಿ ಅವರು ತಿಳಿಸಿದ್ದಾರೆ.

ಎಲ್ಲರ ಚಿತ್ತ ಇದೀಗ ಯಡಿಯೂರಪ್ಪ ಅವರ ಮೇಲಿದೆ. ಯಡಿಯೂರಪ್ಪ ಅವರು ನೆರೆ ಸಂತ್ರಸ್ತರಿಗೆ ಅದೆಷ್ಟು ಬೇಗ ಪರಿಹಾರ ಕೊಡಿಸುತ್ತಾರೆ ಎನ್ನುವದನ್ನು ಇಡೀ ರಾಜ್ಯದ ಜನತೆ ಕಾದು ನೋಡುತ್ತಿದೆ.


మరింత సమాచారం తెలుసుకోండి: