ಬೆಂಗಳೂರು: ನನ್ ಮಗಂದ್, ನನ್ ಯಕಡ ಎಂದೇ ಹುಚ್ಚುಚ್ಚಾಗಿ ಆಡುತ್ತಲೇ ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರೀಯಲ್ಲಿ ಭಾರೀ ಹೆಸರು ಮಾಡಿದ ಹುಚ್ಚ ವೆಂಕಟ್ ಇದೀಗ ಇನ್ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜೊತೆಯೂ ಗಲಾಟೆ ಮಾಡಿಕೊಳ್ಳಲ್ಲ ಎಂದು ಸ್ಪಷ್ಟ  ಹೇಳಿಕೆ ಕೊಟ್ಟಿದ್ದಾರೆ. ಹೌದು, ಶಾಕ್ ಆದರೂ ಸಹ ನಂಬಲೇಬೇಕಾದ ವಿಷಯವಿದು. 
 
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್, ಜನರು ನನ್ನ ಹತ್ತಿರ ಬರೋದಕ್ಕೂ ಹೆದರುತ್ತಿದ್ದಾರೆ. ಹಾಗಾಗಿ ಮನಸ್ಸಿಗೆ ನೋವಾಗಿದ್ದು, ಯಾರೊಂದಿಗೆ ಗಲಾಟೆ ಮಾಡಿಕೊಳ್ಳಲ್ಲ. ಶೂಟಿಂಗ್ ಹೋದ ಸಂದರ್ಭದಲ್ಲಿ ಕೆಲ ದುರ್ಘಟನೆಗಳು ನಡೆದಿದ್ದರಿಂದ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡುತ್ತೇನೆ. ಈ ಹಿಂದೆ ಹಲವು ತಪ್ಪುಗಳನ್ನು ಮಾಡಿದ್ದು, ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು. ತುಂಬಾ ನೊಂದು ಈ ಮಾತುಗಳನ್ನು ಆಡಿದರು. 
 
ನಾನು ಹುಚ್ಚನ ರೀತಿ ಆಡುತ್ತಿದ್ದರಿಂದ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹೆದರುತ್ತಿದ್ದಾರೆ. ನನ್ನ ಬಳಿ ಬಂದ್ರೆ ನಾನು ಹೊಡ್ತೀನಿ ಅಂತ ಹೇಳುವದನ್ನು ಕೇಳಿಸಿಕೊಂಡಿದ್ದೇನೆ. ತಪ್ಪು ನೋಡಿದ್ರೆ ಕೋಪ ಬರುತ್ತೆ. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‍ಬಾಸ್ ಮನೆಗೆ ಪ್ರವೇಶ ನೀಡಿದ್ರೂ ಹೋಗ್ತೀನಿ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದ್ರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ಕೋರುತ್ತೇನೆ ಎಂದು ತಿಳಿಸಿದ್ದಾರೆ.
 
ಸಿನಿಮಾ ಆಫರ್, ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಬಂದು ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್ ನನ್ನು ಮರೆತು ಬಿಡಿ. ನಾನು ಬದಲಾಗಿದ್ದು, ಎಲ್ಲ ಘಟನೆಗಳು ನಡೆದಿದ್ದು ಆಕಸ್ಮಿಕ.ಖಾಸಗಿ ಕಾರ್ಯಕ್ರಮ, ಮದುವೆಗಳು ಬಂದರೂ ಬರುತ್ತೇನೆ. ಬಿಗ್‍ಬಾಸ್ ಮನೆಗೆ ಹೋಗಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿಯೂ ಫಿಟ್ ಆಗಿದ್ದೇನೆ. ಯಾವಾಗ ಔಟ್ ಆಗ್ತೀನಿ ಎಂಬುವುದು ಗೊತ್ತಿಲ್ಲ. ಜನರ ಪ್ರೀತಿ ಮುಖ್ಯ, ಜನರಿಗಾಗಿ ನಾನು ಏನೇ ಮಾಡಲು ಸಿದ್ದ. ಮುಂದಿನ ದಿನಮಾನಗಳಲ್ಲಿ ಸರಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.

మరింత సమాచారం తెలుసుకోండి: