ಬೆಂಗಳೂರು: ಮಾಜಿ ಸಚಿವ ಎಂ. ಬಿ ಪಾಟೀಲ್ ಸದ್ಯ ರಾಜ್ಯ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ. ಅದರ ಜೊತೆಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅದು ಯಾಕೆ ಅಂತ ಹೇಳ್ತೀವಿ, ಮುಂದೆ ಓದಿ. ಭಾರತೀಯ ಜನತಾ ಪಕ್ಷದ ಕಚೇರಿಗೆ ಲಿಂಗಾಯಿತ ಸಮುದಾಯದ ಕಾರ್ಯಕರ್ತರು ಬರಬೇಡಿ ಎಂದು ಹೇಳಿರುವುದು ದುರದೃಷ್ಟಕರ ಎಂದು ಶಾಸಕ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಂಗಳವಾರ ಸದಾಶಿವನಗರದಲ್ಲಿ  ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಕಚೇರಿಗೆ ಯಾವುದೇ ಸಮುದಾಯದವರನ್ನು ಬರಬೇಡಿ ಎಂದು ಹೇಳುವುದು ಸರಿಯಲ್ಲ. ಒಂದು ವೇಳೆ ಬಿಜೆಪಿ ನಾಯಕರು ಆ ರೀತಿ ನಡೆದುಕೊಂಡಿದ್ದರು ಅದು ಅಕ್ಷಮ್ಯ ಎಂದು ತಿಳಿಸಿದ್ದಾರೆ. 


ಅತೃಪ್ತರು, ಅನರ್ಹ ಶಾಸಕರಿಂದ ಹೊಸಜಿಲ್ಲೆಗಳ ರಚನೆಗೆ ಬೇಡಿಕೆಗಳು ಹೆಚ್ಚಾಗುತ್ತಿವೆ. ಬಹಳಷ್ಟು ಕಡೆ ಜಿಲ್ಲೆಗಳ ರಚನೆಗೆ ಒತ್ತಡಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಬೇಕು. ಸ್ಥಳೀಯರ ಅಭಿಪ್ರಾಯ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳಬೇಕ ಎಂದು ಒತ್ತಾಯಿಸಿದರು.  ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಹಿರಿಯ ನಾಯಕರು. ಅವರಿಗೆ ಅನ್ಯಾಯ ಆಗಿದೆಯೋ ಇಲ್ಲವೋ ಎಂಬುದನ್ನು ಅವರೇ ಹೇಳಬೇಕು. ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಹ ತಿಳಿಸಿದ್ದಾರೆ. 


ರಾಜ್ಯ ಸರ್ಕಾರ ವಿಧಾನಸಭೆ ಅಧಿವೇಶನದಲ್ಲಿ ಟಿ.ವಿ ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಮಾಧ್ಯಮಗಳಿಗೆ ದೊಡ್ಡ ಪಾತ್ರವಿದೆ. ಮಹತ್ವವಿದೆ. ಪ್ರವಾಹ ಸಂದರ್ಭದಲ್ಲಿ ಲಕ್ಷಾಂತರ ಜನ ಬೀದಿಪಾಲಾಗಿದ್ದರು. ಅವರ ಕಣ್ಣೀರು ಒರೆಸುವ ಕೆಲಸವನ್ನು ಮಾಧ್ಯಮಗಳು ಮಾಡಿವೆ. ಅವುಗಳ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ನಿಷೇಧಿಸಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ.ಈ ರೀತಿಯ ಸಲಹೆಗಳನ್ನು ಅವರಿಗೆ ಯಾರೂ ನೀಡುತ್ತಾರೋ ಎಂಬ ಗೊಂದಲ ಕಾಡುತ್ತಿದೆ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಬೇಕಿತ್ತು. ಹವಾಮಾನ ಕೆಟ್ಟಿರುವುದರಿಂದ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗಿದೆ ಎಂದರು.


మరింత సమాచారం తెలుసుకోండి: