ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಆಪರೇಷನ್ ಕಮಲದ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್ ಇದೀಗ ಮತ್ತೇ ಸುಪ್ರಿಂ ಕೋರ್ಟ್ ಮೊರೆಯೋಗಿದೆ. ಸೋಮವಾರ ಕಾಂಗ್ರೆಸ್​ ಪರ ವಕೀಲ ಕಪೀಲ್​​ ಸಿಬಲ್,​​​​ ಬಿಎಸ್​ವೈ ಆಡಿಯೋ ಪರಿಶೀಲಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡಲಿದ್ದಾರೆ.  ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಬಿ.ಎಸ್​.ವೈ ಆಪರೇಷನ್​​ ಕಮಲದ ಬಗ್ಗೆ ಮಾತಾಡಿರುವ ಆಡಿಯೋ ಸಲ್ಲಿಸಲಿದ್ದಾರೆ. ಅನರ್ಹ ಶಾಸಕರ ಪ್ರಕರಣದಲ್ಲಿ ತೀರ್ಪು ನೀಡುವ ಮುನ್ನ ಬಿಎಸ್​ವೈ ಆಡಿಯೋ ಪರಿಶೀಲಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ. 


ಕಳೆದ ತಿಂಗಳು ಅ.25ರಂದು ಕಾಂಗ್ರೆಸ್​-ಜೆಡಿಎಸ್​ ಪಕ್ಷದ 17 ಅನರ್ಹ ಶಾಸಕರ ಅರ್ಜಿ ಪ್ರಕರಣದ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನವೆಂಬರ್ 4ರವರೆಗೂ ಕೋರ್ಟ್​ಗೆ ರಜೆ ಇರುವುದರಿಂದ ಅನರ್ಹ ಶಾಸಕರಿಗೆ ಮತ್ತಷ್ಟು ಆತಂಕ ಹೆಚ್ಚಾಗಿತ್ತು. ನ್ಯಾ. ಎನ್.ವಿ ರಮಣ ನೇತೃತ್ವದ ನ್ಯಾಯಪೀಠ ಅನರ್ಹ ಶಾಸಕರ ಅರ್ಜಿ ವಿಚಾರಣೆ ಮಾಡುತ್ತಿದೆ. ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಕೋರ್​​ ಕಮಿಟಿ ಸಭೆ ವೇಳೆ ಬಿಎಸ್​ವೈ ಆಪರೇಷನ್​​ ಕಮಲದ ಬಗ್ಗೆ ಮಾತಾಡಿದ್ದು, ಆಡಿಯೋ ಭಾರೀ ವೈರಲ್​​ ಆಗಿದೆ. ಈ ಆಡಿಯೋ ಪ್ರಕರಣವೀಗ ಸುಪ್ರೀಂಕೋರ್ಟ್​ ಮೆಟ್ಟಿಲೇರಲಿದ್ದು, ಅನರ್ಹ ಶಾಸಕರಿಗೆ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.


ರಾಜೀನಾಮೆ ನೀಡಿದ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಬೇಕೇ ಹೊರತು ರಾಜ್ಯಪಾಲರ ಕಚೇರಿಗಲ್ಲ. ಶಾಸಕರು ರಾಜ್ಯಪಾಲರ ಬಳಿ ಹೋಗಿದ್ದೇಕೆ? ಅವರಾರೂ ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡಿಲ್ಲ. ಹಾಗಾಗಿ ಬೇರೆ ಪಕ್ಷ ಸೇರಲೆಂದೇ ರಾಜೀನಾಮೆ ನೀಡಿರುವುದರಲ್ಲಿ ಅನುಮಾನವೇ ಇಲ್ಲ. ಶಾಸಕರ ಖರೀದಿ ಬಗ್ಗೆ ಆಡಿಯೋ ಟೇಪ್ ಕೂಡ ಮಾಡಲಾಗಿತ್ತು. ರಾಜೀನಾಮೆ ನೀಡಿದ ಶಾಸಕರು ಮುಂಬೈಗೆ ಹೋಗಿದ್ದು ಬಿಜೆಪಿಯ ರಾಜೀವ್ ಚಂದ್ರಶೇಖರ್ ವಿಮಾನದಲ್ಲಿ ಎಂಬುದನ್ನು ನಾವಿಲ್ಲಿ ಗಮನಿಸಬೇಕು ಎಂದು ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಆಡಿಯೋ ಬಾಂಬ್ ನಿಂದ ಅನರ್ಹರ ಪ್ರಕರಣ ಮತ್ತೊಂದು ತಿರುವಿ ಪಡೆಯುವ ಸಾಧ್ಯತೆಯಿದೆ.


మరింత సమాచారం తెలుసుకోండి: