ಕರುನಾಡಿನ ಅಣ್ಣಾವ್ರು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅಂದ್ರೆ ಯಾರಿಗೆ ಗೊತ್ತಿಲ್ಲ  ಹೇಳಿ. ಕರುನಾಡಿನ ಮನೆ ಮನದಲ್ಲೂ ಇಂದಿಗೂ ನೆನಪಲಿರುವ ರಾಜ್ ಅವರ ಕುಟುಂಬದಿಂದ ಇದೀಗ ಮತ್ತೊಂದು ಪ್ರತಿಭೆ ಅನಾವರಣವಾಗಿದೆ. ಇದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರ್ಶೀವಾದವೂ ಇದೆ.
 
ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ರಾಮ್‌ ಕುಮಾರ್‌, ಶ್ರೀಮುರಳಿ, ವಿಜಯ ರಾಘವೇಂದ್ರ, ವಿನಯ್‌ ರಾಜಕುಮಾರ್‌, ಧೀರನ್‌ ರಾಮಕುಮಾರ್‌, ಧನ್ಯಾ ರಾಮ್‌ಕುಮಾರ್‌ ಹೀಗೆ ವರನಟ ಡಾ. ರಾಜಕುಮಾರ್‌ ಕುಟುಂಬದ ಅನೇಕರು ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಈ ಸಾಲಿಗೆ ಧ್ರುವನ್‌ ಎಂಬ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ. ಹೌದು, ಪಾರ್ವತಮ್ಮ ರಾಜಕುಮಾರ್‌ ಅವರ ತಮ್ಮನ ಮಗ ಧ್ರುವನ್‌ ಈಗ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. 
 
ಧ್ರುವನ್ ನೀನಾಸಂ’ನಲ್ಲಿ ಕೆಲ ಕಾಲ ಅಭಿನಯ ತರಬೇತಿ ಪಡೆದುಕೊಂಡಿದ್ದು, ಸುಮಾರು ಐದಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವನ್ನೂ ಪಡೆದುಕೊಂಡಿದ್ದಾರೆ.
 
ಇತ್ತೀಚೆಗೆ ಧ್ರುವನ್‌ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಚಿತ್ರದ ಮೊದಲ ಸನ್ನಿವೇಶಕ್ಕೆ ಸೆಂಚುರಿ ಸ್ಟಾರ್‌ ಶಿವರಾಜಕುಮಾರ್‌ ಆರಂಭ ಫ‌ಲಕ ತೋರಿದರೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನೂ ಹೆಸರಿಡದ ಈ ಚಿತ್ರವನ್ನು ಬಿ.ಎಸ್‌.ಸುಧೀಂದ್ರ ನಿರ್ಮಿಸುತ್ತಿದ್ದಾರೆ.
 
“ಕೃಷ್ಣನ್‌ ಲವ್‌ಸ್ಟೋರಿ’, “ಕೃಷ್ಣಲೀಲಾ’, ಜೋಗಿ ಪ್ರೇಮ್‌ ನಿರ್ದೇಶನ “ಏಕ್‌ ಲವ್‌ ಯಾ’ ಮೊದಲಾದ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ, ರಘುಕೋವಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
 
ಇನ್ನು ಈ ಚಿತ್ರದ ಬಹುಪಾಲು ಚಿತ್ರೀಕರಣ ಕಾಶಿಯಲ್ಲಿ ನಡೆಯಲಿದ್ದು, ಉಳಿದುದನ್ನು ಬೆಂಗಳೂರು, ಜಮ್ಮು ಮತ್ತು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸತ್ಯಹೆಗಡೆ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರ ಅದ್ಧೂರಿಯಾಗಿ ಮೂಡಿಬರಲಿದೆಯೆಂದು ತಿಳಿಸಿದ್ದಾರೆ.

మరింత సమాచారం తెలుసుకోండి: