ಕರೋನಾ ವೈರಸ್‌ನ ಪರಿಣಾಮವಾಗಿ ಇಡೀ ದೇಶವೇ ಲಾಕ್‌ಡೌನ್ ಮಾಡಲಾಗಿರುವಂತಹ ಸಂದರ್ಭದಲ್ಲಿ ಎಲ್ಲಾ ಸಾರಿಗೆ ವ್ಯವಸ್ಥೆಗಳು ಬಂದ್ ಇದರಿಂದ ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ಹೊರಗಡೆ ಹೋಗದಾಗದಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳಿಗೆ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಬಗೆ ಹರಿಸುವಂತಹ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ಕೆಲವು ಸೇವೆಗಳನ್ನು ನೀಡಲು ಕರ್ನಾಟಕದ ಸಾಂಸ್ಕೃತಿಕ ನಗರ ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಅಷ್ಟಕ್ಕೂ ಜಿಲ್ಲಾಡಳಿತ ಯಾವರೀತಿಯ ಸೇವೆಯನ್ನು ನಿಡಲಿದೆ  ಗೊತ್ತಾ? ಇಲ್ಲಿದೆ ನೋಡಿ. 

 

ಲಾಕ್ಡೌನ್ ಜಾರಿಯಲ್ಲಿರುವುದರಿಂದ ಪಡಿತರ ಚೀಟಿದಾರರು ಮನೆಯಿಂದ ಹೊರಗೆ ಬರಬಾರದು ಎಂಬ ಆದೇಶವಿರುವುದರಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಹೋಗಿ ಪಡಿತರವನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಪಡಿತರ ಚೀಟಿದಾರರಿಗೆ ಮನೆಬಾಗಿಲಿಗೆ ಪಡಿತರ ತಲುಪಿಸುವ ಕಾರ್ಯಕ್ಕೆ ಮೈಸೂರು ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ Pಮುಂದಾಗಿದೆ. ಸುಮಾರು 40 ವಾಹನಗಳಲ್ಲಿ ಪಡಿತರವನ್ನು ತುಂಬಿಕೊಂಡು ಮನೆ ಮನೆಗೆ ಪೂರೈಕೆ ಮಾಡಲಾಗುವುದು. ಈ ಒಂದು ಯೋಜನೆಗೆ ಸಚಿವ ವಿ. ಸೋಮಣ್ಣ  ಚಾಲನೆ ನೀಡಲಾಗಿದೆ. ಎರಡು ತಿಂಗಳ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಣೆ ಮಾಡಲಾಗುವುದು.

 

ನ್ಯಾಯಬೆಲೆ ಅಂಗಡಿಗಳ ಬಳಿ ಜನಜಂಗುಳಿ ಉಂಟಾಗುವುದನ್ನು ತಪ್ಪಿಸಲು ಮನೆಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು. ಅಂತ್ಯೋದಯ ಕಾರ್ಡ್ ದಾರರಿಗೆ ಎರಡು ತಿಂಗಳಿಗೆ 70 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಎರಡು ತಿಂಗಳಿಗೆ 10 ಕೆಜಿ ಅಕ್ಕಿ ಮತ್ತು ಪ್ರತಿ ಕಾರ್ಡಿಗೆ 2 ಕೆಜಿಯಂತೆ 4 ಕೆಜಿ ಗೋಧಿ ನೀಡಲಾಗುವುದು. ಎಪಿಎಲ್ ಕಾರ್ಡ್ ದಾರರಿಗೆ ಎರಡು ಮತ್ತು ಎರಡಕ್ಕಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಕ್ಕೆ 10 ಕೆಜಿಯಂತೆ 20 ಕೆಜಿ ಅಕ್ಕಿಯನ್ನು ನೀಡಲಾಗುವುದು.

 

ಮೈಸೂರು ನಗರದಲ್ಲಿರುವ 206  ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೂಲಕ ವಾಹನಗಳಲ್ಲಿ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು. ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಪಿ. ಶಿವಣ್ಣ ನೇತೃತ್ವದಲ್ಲಿ ಮನೆಮನೆಗೆ ಪಡಿತರ ಪೂರೈಸುವ ಕಾರ್ಯ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ಈ ಯೋಜನೆ ಜಾರಿಯಾಗಿದೆ ಎಂದು ಹೇಳಲಾಗಿದೆ.

 

ಈ ರೀತಿಯಾದ ಕೆಲಸಗಳನ್ನು ಕನಾಟಕದ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತ ಅನುಸರಿಸಿದ್ದೇ ಆದರೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಗುಂಪು ಗೂಡುವಿಕೆಯನ್ನು ತಪ್ಪಿಸಬಹುದಾಗಿದೆ.

 

 

మరింత సమాచారం తెలుసుకోండి: