ಹೈದರಬಾದ್: ಟಾಲಿವುಡ್ ನ ಟಾಪ್ ನಟ ಹಾಗೂ ಆಂಧ್ರ ಪ್ರದೇಶದ ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಇದೀಗ ಭಾರೀ ಸುದ್ದಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಎಡಪಕ್ಷಗಳ ಜೊತೆಗೆ ಗುರುತಿಸಿಕೊಂಡಿದ್ದ ಪವನ್ ಕಲ್ಯಾಣ್ ಇದೀಗ ಬಿಜೆಪಿ ಕೈ ಹಿಡಿದಿರುವುದರ ಹಿಂದೆ ಕರ್ನಾಟಕದ ಪ್ರಭಾವಿ ವ್ಯಕ್ತಿಯೊಬ್ಬರು ಇದ್ದಾರೆ. ಅವರಾರು ಗೊತ್ತಾ! ಅದರ ಹಿಂದಿರುವ ಬಲವಾದ ಕಾರಣವೇನು ಗೊತ್ತಾ!? ಇಲ್ಲಿದೆ ನೋಡಿ ಉತ್ತರ. 
 
ಆಂಧ್ರ ಪ್ರದೇಶದ ಜನಸೇನಾ ಪಕ್ಷದ ಸ್ಥಾಪಕ ಹಾಗೂ ಖ್ಯಾತ ತೆಲುಗು ಸಿನಿಮಾ ನಟ ಪವನ್ ಕಲ್ಯಾಣ್ ಬಿಜೆಪಿ ಕೈ ಹಿಡಿಯುವ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಹಲವು ಸುತ್ತಿನ ಮಾತುಕತೆಯ ಬಳಿಕ ಗುರುವಾರ ಅಧಿಕೃತವಾಗಿ ಬಿಜೆಪಿ ಹಾಗೂ ಜನಸೇನಾ ಪಕ್ಷಗಳು ದೋಸ್ತಿ ಘೋಷಣೆ ಮಾಡಿಕೊಂಡಿವೆ. ಬಿಜೆಪಿ ಸಿದ್ದಾಂತಕ್ಕೆ ಭಿನ್ನವಾಗಿ ಆಂಧ್ರಪ್ರದೇಶದಲ್ಲಿ ಜನಸಂಘಟನೆ ಮಾಡಿಕೊಂಡಿದ್ದ ಪವನ್ ಕಲ್ಯಾಣ್  ನಿರ್ಧಾರ ಸಾಕಷ್ಟು ಚರ್ಚೆಗೂ ಗ್ರಾಸವಾಗುತ್ತಿದೆ.
 
ಬಿಜೆಪಿಗೆ ನೆಲೆ ಇಲ್ಲದ ಆಂಧ್ರ ಪ್ರದೇಶದಲ್ಲಿ ಹೊಸ ರಾಜಕೀಯ ಲೆಕ್ಕಾಚಾರದೊಂದಿಗೆ ಪವನ್ ಕಲ್ಯಾಣ್ ಅವರನ್ನು ಕಮಲದತ್ತ ಒಲಿಸಿಕೊಂಡಿರುವ ಹಿಂದಿರುವ ಪ್ರಭಾವಿ ವ್ಯಕ್ತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್. ಹೌದು, ಹೀಗಂತ ಸ್ವತಃ ಸಂಸದ ಪ್ರತಾಪ್ ಸಿಂಹ ನಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ಜನಸೇನಾ ನಡುವಿನ ಮೈತ್ರಿಯ ಹಿಂದಿನ ಸೂತ್ರಧಾರ ಬಿ.ಎಲ್ ಸಂತೋಷ್ ಆಗಿದ್ದಾರೆ. 2024ರಲ್ಲಿ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವುದರಲ್ಲಿ ಸಂಶಯವಿಲ್ಲ ಎಂದಿರುವುದು ಇದೀಗ ಭಾರೀ ಸುದ್ದಿಯಾಗಿದೆ.
 
ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಮೆಗಾಸ್ಟಾರ್‌ ಹಾಗೂ ಮಾಜಿ ಸಚಿವ ಕೆ ಚಿರಂಜೀವಿ ಸಹೋದರರಾಗಿದ್ದಾರೆ. 2014ರಲ್ಲಿ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಹುಟ್ಟುಹಾಕಿದ್ದರು. ಆರಂಭದಲ್ಲಿ ಬಿಜೆಪಿ ಹಾಗೂ ಟಿಡಿಪಿ ಮೈತ್ರಿಕೂಟವನ್ನು ಅವರು ಬೆಂಬಲಿಸಿದ್ದರೂ 2019 ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐಎಂ, ಸಿಪಿಐ ಹಾಗೂ ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದೀಗ ಬಿಜೆಪಿ ಸೇರಿದ್ದು ಎಷ್ಟರಮಟ್ಟಿಗೆ ಸಕ್ಸಸ್ ಕಾಣುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

మరింత సమాచారం తెలుసుకోండి: